ಅನಿಲ ಮೆಣಸಿನಕಾಯಿ ಸಾರಥ್ಯದ ಜನತಾ ದರ್ಶನದಲ್ಲಿ ಗದಗ ಜಿಲ್ಲೆಯ ಅಭಿವೃದ್ಧಿ ಕನಸು ಬಿಚ್ಚಿಟ್ಟ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

admin Avatar

ಯಶಸ್ವಿಯಾಗಿ ನಡೆದ ಜನತಾ ಸಂವಾದ:ಸ್ಥಳೀಯರ ಅಹವಾಲು ಕೇಳಿದ ಬಸವರಾಜ ಬೊಮ್ಮಾಯಿ

ಗದಗ ಜಿಲ್ಲೆಯ ಅಭಿವೃದ್ಧಿಯ ಕನಸು ಬಿಚ್ಚಿಟ್ಟ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಬಸವರಾಜ ಬೊಮ್ಮಾಯಿ

ಗದಗ: ಗದಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ಯಮ, ಜವಳಿ ಪಾರ್ಕ್, ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್, ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ಸೇರಿದಂತೆ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಗದಗ ನಗರದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಏರ್ಪಡಿಸಿದ್ದ ಜನತಾ ಸಂವಾದ ಕಾರ್ಯಕ್ರಮದಲ್ಲಿ ಸುಮಾರು ಎರಡು ಗಂಟೆ ಕಾಲ ಸಾರ್ವಜನಿಕರ ಅಹವಾಲು ಮತ್ತು ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ.
ಪ್ರಜಾಪ್ರಭುತ್ವದಲ್ಲಿ ಕೇವಲ ಮತ ಹಾಕುವುದಷ್ಟೇ ಮುಖ್ಯವಲ್ಲ. ಆ ನಂತರವೂ ಆಗುಹೋಗುಗಳಲ್ಲಿ ಜನರು ಪಾಲ್ಗೊಳ್ಳಬೇಕು. ಅಭಿವೃದ್ಧಿಯಲ್ಲಿ ಜನರನ್ನು ಪಾಲುದಾರರನ್ನಾಗಿ ಮಾಡಬೇಕು. ಅದಕ್ಕೆ ಜನರ ಪಾಲುಗೊಳ್ಳುವಿಕೆ ಮುಖ್ಯವಾಗಿದೆ. ಅದನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ. ನಮ್ಮ ಪಕ್ಷದ ಸಂಕಲ್ಪ ಪತ್ರ ಕೂಡ ಅದೇ ಆಶಯ ಹೊಂದಿದೆ ಎಂದು ಹೇಳಿದರು.
ಸಂವಾದದಲ್ಲಿ ಹಲವಾರು ಸಮಸ್ಯೆಗಳ ಜೊತೆಗೆ ಸಲಹೆಗಳನ್ನು ನೀಡಿದ್ದೀರಿ, ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದೀರಿ, ನಮಗೆ ಚಿಂತನೆಗೆ ಹಚ್ಚಿದ್ದೀರಿ, ನಾನು ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡುತ್ತೇನೆ ಎಂದರು.
ಗದಗನಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆಗೆ ಎಂಡ್ ಟು ಎಂಡ್ ಪರಿಹಾರ ಸಿಕ್ಕಿಲ್ಲ. ಮಲಪ್ರಭಾ ಯೋಜನೆಯಿಂದ ನೀರು ತಂದರೂ ಸೋರಿಕೆಯಾಗುತ್ತಿದೆ. ಸಿಂಗಟಾಲೂರು ಯೋಜನೆ ಮಾಡಿದ ಮೇಲೆ ಬ್ಯಾರೇಜ್ ನಲ್ಲಿ ನೀರು ಸಂಗ್ರಹ ಮಾಡಲು ಅವಕಾಶವಾಗಿದೆ. ನಾನು ಮುಖ್ಯಮಂತ್ರಿ ಇದ್ದಾಗ ಅಮೃತ 2 ಯೊಜನೆ ಅಡಿ 140 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಈಗಿನ ಸರ್ಕಾರ ಅದನ್ನು ಸರಿಯಾಗಿ ಅನುಷ್ಠಾನ ಮಾಡಿದರೆ, ಗದಗ ನಗರದ ನೀರಿನ ಬಹುತೇಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿರುತ್ತದೆ. ಕಾಲಕಾಲಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಆದಷ್ಟು ಬೇಗ ಸೂಕ್ತ ಯೋಜನೆ ರೂಪಿಸಿ ನೀರಿನ ವ್ಯವಸ್ಥೆ ಮಾಡಿ, ಗಂಡು ಮಕ್ಕಳಿಗೆ ಹೆಣ್ಣು ಕೊಡುವ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು.

ನೇಕಾರರಿಗೆ ಪ್ರೋತ್ಸಾಹ
ನೇಕಾರರ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಹ್ಯಾಂಡ್ ಲೂಮ್ ಮಾದರಿಯಲ್ಲಿ ಪವರ್ ಲೂಮ್ ನೇಕಾರರಿಗೆ ಸವಲತ್ತುಗಳನ್ನು ನೀಡಿದ್ದೇವೆ. ನೇಕಾರ ಸಮ್ಮಾನ ಯೋಜನೆ ಮಾಡಿದ್ದೇವೆ. 50 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ಮಾದರಿಯಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು. ನಾನು ಸಿಎಂ ಆಗಿದ್ದಾಗ ರೈತ ವಿದ್ಯಾನಿಧಿ ಮಾದರಿಯಲ್ಲಿ ನೇಕಾರರ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇ. ಈ ಸರ್ಕಾರ ನಿಲ್ಲಿಸಿದೆ ಎಂದರು.
ಜವಳಿ ಪಾರ್ಕ್
ಗದಗನಲ್ಲಿ ಜವಳಿ ಪಾರ್ಕ್ ಮಾಡುವ ಅಗತ್ಯವಿದೆ. ನಾನು ಸಿಎಂ ಇದ್ದಾಗ ಗದಗ ಸೇರಿ ಮೂರು ಕಡೆ ಜವಳಿ ಪಾರ್ಕ್ ಮಾಡಲು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆ. ಮುಂದಿನ ದಿನಗಳಲ್ಲಿ ಗದಗನಲ್ಲಿ ಜವಳಿ ಪಾರ್ಕ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗಾರ್ಮೆಂಟ್ ಸ್ಥಾಪನೆ ಮಾಡುವುದರಿಂದ ಹೆಣ್ಣು ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಶಿಗ್ಗಾವಿಯಲ್ಲಿ ಗಾರ್ಮೆಂಟ್ ಸ್ಥಾಪನೆ ಮಾಡಿದ್ದು, ಅದರಿಂದ ಐದು ಸಾವಿರ ಮಹಿಳೆಯರು ಉದ್ಯೋಗ ಪಡೆದಿದ್ದಾರೆ. ಅದೇ ರೀತಿ ಗದಗನಲ್ಲಿ ಸ್ಥಾಪನೆ ಮಾಡಲಾಗುವುದು. ಇದರಿಂದ ಹೆಚ್ಚಿನ ಮಹಿಳೆಯರಿಗೆ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.
ಗದಗ್ ಗೆ ಪ್ರತ್ಯೇಕ ಹಾಲು ಒಕ್ಕೂಟ
ಇನ್ನು ಮಾಜಿ ಸೈನಿಕರಿಗೆ ಭವನ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಮುದ್ರಣ ಉದ್ಯಮಕ್ಕೆ ಅಗತ್ಯ ಸವಲತ್ತು ಕೊಡುವ ಕೆಲಸ ಮಾಡಲಾಗುವುದು. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ 1100 ಕೋಟಿ ರೂ.‌ಬಾಕಿ ಉಳಿಸಿಕೊಂಡಿದೆ. ನಾನು ಸಿಎಂ ಆಗಿದ್ದಾಗ ಹಾವೇರಿಯಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ಸ್ಥಾಪನೆ ಮಾಡಿದ್ದೇವೆ. ಇದರಿಂದ ಅಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಗದಗನ ಸ್ಥಳಿಯ ಮುಖಂಡರ ಸಹಕಾರ ಸಿಕ್ಕರೆ ಈ ಜಿಲ್ಲೆಗೂ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ ಎಂದರು.
ಕೋಲ್ಡ್ ಸ್ಟೋರೇಜ್
ಮೆಣಸಿನಕಾಯಿ ಬೆಳೆಗಾರರಿಗೆ ಕೋಲ್ಡ್ ಸ್ಟೋರೇಜ್ ಅಗತ್ಯವಿದ್ದು ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲಾಗುವುದು. ಕೈಗಾರೀಕರಣ ಆಗಲು ಜಮೀನು ಅಗತ್ಯವಿದೆ. ಅದಕ್ಕೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಉದ್ಯಮಗಳನ್ನು ತರಲು ಪ್ರಯತ್ನ ಮಾಡಲಾಗುವುದು. ಗದಗ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಬಂಜಾರಾ ಸಮುದಾಯದ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಬಂದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಪ್ರಮಾಣ ಶೇ 50 ರ ಮಿತಿ ಸಡಿಲಗೊಳಿಸಿದರೆ ಎಲ್ಲ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳವಾಗುತ್ತದೆ. ಗದಗ ರಿಂಗ್ ರೋಡ್ ಮಾಡಲು ಕ್ರಮ. ಫುಡ್ ಪ್ರೊಸೆಸಿಂಗ್ ಪಾರ್ಕ್ ಮಾಡಲು ಹೆಚ್ಚಿನ ಅವಕಾಶ ಇದೆ. ಅದಕ್ಕೆ ಹೆಚ್ಚಿನ ಶಕ್ತಿ ಹಾಕಲಾಗುವುದು. ಬೆಟಗೇರಿಯನ್ನು ನೇಕಾರರ ಹಬ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೊಂದು ನನಗೆ ಕಣ್ಣು ತೆರೆಸುವ ಕಾರ್ಯಕ್ರಮ, ಸಕಾರಾತ್ಮಕ ಚರ್ಚೆಯಾಗಿದೆ. ನಾವು ನೀವು ಸೇರಿ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕಾಂತಿಲಾಲ ಬನ್ಸಾಲಿ ಮತ್ತಿತರರು ಹಾಜರಿದ್ದರು.

ಬುಲೆಟ್ ಪಾಯಿಂಟ್ಸ್

  • ಆಹಾರ ಸಂಸ್ಕರಣಾ ಉದ್ಯಮ
  • ಜವಳಿ ಪಾರ್ಕ್ ಸ್ಥಾಪನೆ
  • ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್
  • ಗದಗ ರಿಂಗ್ ರಸ್ತೆ
  • ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

Leave a Reply

Your email address will not be published. Required fields are marked *