ಗದಗ: ಗದಗ ಮೃಗಾಲಯದಲ್ಲಿ ನೈಟ್ ಸಫಾರಿ ಆರಂಭ ಮಾಡುವ ಮೂಲಕ ದೇಶದಲ್ಲಿಯೇ ಅತ್ಯಂತ ಆಕರ್ಷಣೆಯ ಮೃಗಾಲಯವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯೋನ್ಮುಖವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಕೆ ಪಾಟೀಲ ಹೇಳಿದರು.
ನಗರದ ಮೃಗಾಲಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿರುವ ಗುಳ್ಳೆನರಿ, ಬಂಗಾಳಿ ನರಿ ಹಾಗೂ ಕೆನ್ನಾಯಿ ಪ್ರಾಣಿ ಮನೆ ಹಾಗೂ ಆವರಣ ಮತ್ತು ಮಾಗಡಿ ಕೆರೆ ರಾಮ್ಸಾರ್ ಸೈಟ್ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈಗಾಗಲೇ ಮೃಗಾಲಯದಲ್ಲಿ ಪ್ರತಿಶತ 70 ರಷ್ಟು ಪ್ರಾಣಿಗಳಿದ್ದು ಇನ್ನುಳಿದ ಪ್ರಾಣಿಗಳನ್ನು ಆದಷ್ಟೂ ಬೇಗನೆ ತರಲಾಗುವುದು ಎಂದು ಹೇಳಿದರು.
ಮಾಗಡಿ ಕೆರೆಗೆ ಯುನೆಸ್ಕೋ ಗುರುತಿಸುವ ರಾಮ್ಸಾರ್ ಸೈಟ್ಗೆ ಸೇರ್ಪಡೆಯಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಹೇಳಿದರು.
ಸಹಕಾರಿ ಧುರೀಣ ಕೆ.ಎಚ್.ಪಾಟೀಲ ಅವರು ಕಂಡ ಕನಸಿನಂತೆ ಗದಗ ಮೃಗಾಲಯ ಆರಂಭವಾಗಿದೆ. ಅವರ ಆಶಯದಂತೆ ಮೃಗಾಲಯ ಸರಿಯಾಗಿ ನಡೆಯಬೇಕು. ಗದಗ ಮೃಗಾಲಯಕ್ಕೆ ಹೆಚ್ಚುವರಿಯಾಗಿ 13 ಎಕರೆ ಜಮೀನು ಜೊತೆಗೆ ಒಟ್ಟು 15 ಎಕರೆ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಎಂದರು.
2025 ಮಾರ್ಚ 16 ರಂದು ಕೆ.ಎಚ್.ಪಾಟೀಲ ಜನ್ಮಶತಾಬ್ಧಿ ವರ್ಷಕ್ಕೆ ರಚನಾತ್ಮಕ ಕೆಲಸ ಕೈಗೊಂಡು ಮೃಗಾಲಯಕ್ಕೆ ನೈಟ್ ಸಫಾರಿ ಕಲ್ಪಿಸುವ ಮೂಲಕ ದೇಶದಲ್ಲಿಯೇ ಅತ್ಯಂತ ಆಕರ್ಷಣೆಯ ಮೃಗಾಲಯ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಅದಕ್ಕೆ ಅಗತ್ಯವಿರುವ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ,ಡಾ. ಎಚ್.ಎನ್.ನಾಗನೂರ ಸೇರಿದಂತೆ ಮತ್ತಿತರರು ಇದ್ದರು.
Leave a Reply